ಗುರಿ
“ಮಾತೃಭಾಷಾ ಸಾಕ್ಷರತೆ ಪ್ರತಿಯೊಬ್ಬ ಕನ್ನಡ ಕಂದನ ಹಕ್ಕು”

ದೃಷ್ಟಿಕೋನ
“ನವ ಪೀಳಿಗೆಗೆ ಕನ್ನಡ ಕಲಿಸಿ, ಭಾಷೆ ಉಳಿಸಿ”

ಹಿನ್ನೆಲೆ

“ಮಾತೃಭಾಷಾ ಸಾಕ್ಷರತೆ ಪ್ರತಿಯೊಬ್ಬ ಕನ್ನಡ ಕಂದನ ಹಕ್ಕು” ಎಂದು ಸಾರಿ ವಿದೇಶದಲ್ಲಿನ ಯುವ ಪೀಳಿಗೆಗೆ ಸಾಮೂಹಿಕ ಕನ್ನಡ ಕಲಿಕೆಗೆ ಅವಕಾಶ ಕಲ್ಪಿಸಲು ಉದಯವಾದದ್ದೇ “ಕನ್ನಡ ಮಿತ್ರರು ಯು ಎ ಇ” ಸಂಘಟನೆ ಮತ್ತು ಅದರ ಕನ್ನಡ ಕಲಿಕಾ ವೇದಿಕೆಯೇ ” ಕನ್ನಡ ಪಾಠಶಾಲೆ ದುಬೈ”. ೨೦೧೪ರಲ್ಲಿ ಶಶಿಧರ್ ನಾಗರಾಜಪ್ಪ ನವರೊಂದಿಗೆ ಕೈಗೂಡಿಸಿದ ೫೦ ಜನ ಸ್ವಯಂಪ್ರೇರಿತ ಸದಸ್ಯರು ಪ್ರತಿಫಲಾಪೇಕ್ಷೆ ಇಲ್ಲದೆ ಕನ್ನಡ ಭಾಷೆ ಹಾಗು ನಾಡಿನ ಸಂಸ್ಕೃತಿಯನ್ನು ಮುಂದಿನ ನವಪೀಳಿಗೆಗೆ ವರ್ಗಾಹಿಸಲು ಸೇವೆಸಲ್ಲಿಸುತ್ತಿದ್ದಾರೆ.

ಉಚಿತ ಕಲಿಕೆ

ಕನ್ನಡ ಪಾಠಶಾಲೆ ದುಬೈ, ಯು ಎ ಇ ಯಲ್ಲಿ ನೆಲೆಸಿರುವ ಎಲ್ಲಾ ಕನ್ನಡಿಗರ ಮಕ್ಕಳಿಗೆ ಉಚಿತವಾಗಿ ಕನ್ನಡ ಕಲಿಸುತಿದ್ದು ಒಂದು ಸ್ವಯಂ ಸೇವೆಯ ಮಾಧರಿಯನ್ನು ಅನುಸರಿಸಲಾಗುತ್ತಿದೆ. ಪಾಠ ಕಲಿಸಲು ಬೇಕಾಗುವ ಸ್ಥಳಾವಕಾಶವನ್ನು ಮೊಟ್ಟಮೊದಲಿಗೆ ಸುತ್ತೂರು ಸಂಸ್ಥಾನ ಮಠದ ಪೂಜ್ಯ ಗುರುಗಳಾದ ಶ್ರೀ ಶ್ರೀ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳವರ ಆಶೀರ್ವಾದದಿಂದ ಪಡೆದು, ದುಬೈನ ಜೆ. ಎಸ್. ಎಸ್. ಶಾಲೆಯಲ್ಲಿ ಆರಂಭಿಸಲಾಯಿತು. 2018 ರಲ್ಲಿ ಶ್ರೀ ಓಂಪ್ರಕಾಶ್ರವರ ಅಸಾಪ್ ಟ್ಯುಟರ್ಸ್ ಕೊಠಡಿಗಳಲ್ಲಿ ಉಚಿತ ಸಹಕಾರದೊಂದಿಗೆ ಮತ್ತು 2019, 2020 ರಲ್ಲಿ ಶ್ರೀ ಪ್ರಭಾಕರ ಕೋರೆರವರು ದುಬೈನಲ್ಲಿ ಸ್ಥಾಪಿಸಿರುವ ಬಿಲ್ವಾ ಇಂಡಿಯನ್ ಸ್ಕೂಲ್ನಲ್ಲಿ  ಭೌತಿಕ ತರಗತಿಗಳನ್ನು ನಡೆಸುತ್ತಿದ್ದಾಗ ಕೋವಿಡ್ ಮಹಾಮಾರಿಯಿಂದಾಗಿ ಆನ್ಲೈನ್ ತರಗತಿಗಳನ್ನು ಆರಂಭಿಸಲಾಯಿತು. ಪ್ರಸ್ತುತವಾಗಿ ತರಗತಿಗಳನ್ನು ಆನ್ಲೈನ್ನಲ್ಲಿಯೇ ಮುಂದುವರೆಸಲಾಗುತ್ತಿದೆ.

17 ಶಿಕ್ಷಕಿಯರು ಸ್ವಪ್ರೇರಣೆಯಿಂದ ವೇತನ ರಹಿತ ಸೇವೆಸಲ್ಲಿಸಿ ಅನಿವಾಸಿ ಕನ್ನಡಿಗರ ಸಾಕ್ಷರತಾ ಆಂದೋಲನದಲ್ಲಿ ಭಾಗಿಯಾಗಿದ್ದಾರೆ.